ಸೌಂದರ್ಯ (ಜುಲೈ ೧೮, ೧೯೭೨ – ಏಪ್ರಿಲ್ ೧೭, ೨೦೦೪) ಭಾರತೀಯ ಚಲನಚಿತ್ರರಂಗದ ನಟಿ, ನಿರ್ಮಾಪಕಿ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಹಲವು ಬಾರಿ ನಟನೆಗೆ ಪ್ರಶಸ್ತಿಗಳನ್ನು ಪಡೆದ ಅವರು, ೨೦೦೨ರಲ್ಲಿ ನಿರ್ಮಿಸಿದ ದ್ವೀಪ ಕನ್ನಡ ಚಿತ್ರಕ್ಕಾಗಿ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದರು. == ಆರಂಭಿಕ ಜೀವನ == ಸೌಂದರ್ಯ ಅವರ ಬಾಲ್ಯದ ಹೆಸರು ಸೌಮ್ಯ. ಹುಟ್ಟಿದ್ದು ಜುಲೈ 18, 1972ರಂದು, ಕೋಲಾರದ ಮುಳುಬಾಗಿಲಿನಲ್ಲಿ. ಚಿತ್ರ ನಿರ್ಮಾಪಕ ಮತ್ತು ಲೇಖಕರಾಗಿದ್ದ ಸತ್ಯನಾರಾಯಣ ಅವರ ತಂದೆ. == ವೃತ್ತಿ ಜೀವನ == ಹಂಸಲೇಖ ನಿರ್ಮಿಸಿದ, ನಿರ್ದೇಶಿಸಿದ 1992ರ ಗಂಧರ್ವ ಚಿತ್ರ ಸೌಂದರ್ಯ ಅವರ ಮೊದಲ ಚಿತ್ರ. ಅದೇ ವರ್ಷ ಕನ್ನಡದ ನಾಲ್ಕು ಮತ್ತು ತೆಲುಗಿನ ಎರಡು ಚಿತ್ರಗಳಲ್ಲಿ ನಟಿಸಿದರು. 1992ರಿಂದ 2004ರವರೆಗೆ ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 140. === ಕನ್ನಡ ಚಿತ್ರರಂಗದಲ್ಲಿ === ಸೌಂದರ್ಯ ನಟಿಸಿದ ಮೊದಲ ಚಿತ್ರ ಕನ್ನಡದ ಗಂಧರ್ವ. ಸುಮಾರು 20ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಸೌಂದರ್ಯ, ರವಿಚಂದ್ರನ್ ನಿರ್ದೇಶಿಸಿದ ಸಿಪಾಯಿ, ಪಿ. ವಾಸು ನಿರ್ದೇಶಿಸಿದ ಆಪ್ತಮಿತ್ರ ಚಿತ್ರಗಳ ನಟನೆಗೆ ಮೆಚ್ಚುಗೆ ಗಳಿಸಿದರು. ಸಿ. ಎನ್. ಮುಕ್ತಾ ಅವರ ಕಾದಂಬರಿ ಆಧರಿಸಿ ಮೂಡಿಬಂದ ದೋಣಿ ಸಾಗಲಿ ಚಿತ್ರದ ಕ್ಷಮಾ ಪಾತ್ರ ನಿರ್ವಹಿಸಿದ ಸೌಂದರ್ಯ, ಅದೇ ಚಿತ್ರಕ್ಕಾಗಿ ಕರ್ನಾಟಕ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದರು. 2002ರಲ್ಲಿ ಬಿಡುಗಡೆಯಾದ ದ್ವೀಪ ಚಿತ್ರವನ್ನು ನಿರ್ಮಾಣ ಮಾಡಿದ ಸೌಂದರ್ಯ, ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ ಪಡೆದರು. ಅಣೆಕಟ್ಟೆಗಾಗಿ ಭೂಮಿ ನೀಡಬೇಕಾದ ಜನರ ಜೀವನದ ಸುತ್ತ ಹೆಣೆದ ಆ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದಾರೆ. === ತೆಲುಗು ಚಿತ್ರರಂಗದಲ್ಲಿ === ತೆಲುಗು ಚಿತ್ರರಂಗದ ಆಧುನಿಕ ಸಾವಿತ್ರಿ ಎಂಬ ಹಿರಿಮೆ ಪಡೆದ ಸೌಂದರ್ಯ ತಮ್ಮ ವೃತ್ತಿ ಜೀವನದ ಹೆಚ್ಚು ಚಿತ್ರಗಳನ್ನು ತೆಲುಗಿನಲ್ಲಿ ಅಭಿನಯಿಸಿದ್ದಾರೆ. ಸಮಕಾಲೀನ ನಟರೆಲ್ಲರ ಜೊತೆ ಅಭಿನಯಿಸಿದ ಸೌಂದರ್ಯ, ನಟ ವಿಕ್ಟರಿ ವೆಂಕಟೇಶ್ ಜೊತೆಗೆ ಯಶಸ್ವೀ ತಾರಜೋಡಿ ಎನಿಸಿತ್ತು. ತಾವು ನಟಿಸಿದ 140ಕ್ಕೂ ಹೆಚ್ಚಿನ ಚಿತ್ರಗಳಲ್ಲಿ 80 ಚಿತ್ರಗಳು ತೆಲುಗಿನವೇ ಆಗಿವೆ. === ಇತರೆ ಭಾಷೆಗಳಲ್ಲಿ === ತೆಲುಗು, ಕನ್ನಡದ ಬಳಿಕ ಸೌಂದರ್ಯ ನಟಿಸಿದ ಹೆಚ್ಚು ಚಿತ್ರಗಳು ತಮಿಳಿನವು. ರಜನೀಕಾಂತ್ ಮುಂತಾದ ನಟರೊಂದಿಗೆ ನಟಿಸಿದ ಸೌಂದರ್ಯ, ಮಲಯಾಳಂ ಭಾಷೆಯಲ್ಲೂ ನಟಿಸಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ಸೂರ್ಯವಂಶ ಚಿತ್ರದಲ್ಲಿ ನಟಿಸಿದ್ದಾರೆ. == ನಿಧನ == ಸೌಂದರ್ಯ ಅವರು ಏಪ್ರಿಲ್ 17, 2004ರ ಶನಿವಾರದಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು. ಅಗ್ನಿ ಎವಿಯೇಷನ್‌ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನ(-180 )ದಲ್ಲಿ ಆಂಧ್ರಪ್ರದೇಶದ ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಬೆಂಗಳೂರಿನ ಜಕ್ಕೂರು ನಿಲ್ದಾಣದಿಂದ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಸೌಂದರ್ಯ ಇದ್ದ ಕಿರುವಿಮಾನ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪತನವಾಗಿತ್ತು. ಸೌಂದರ್ಯ, ಅವರ ತಮ್ಮ ಸೇರಿದಂತೆ ವಿಮಾನದಲ್ಲಿದ್ದ ನಾಲ್ವರೂ ನಿಧನ ಹೊಂದಿದರು. == ಕನ್ನಡದಲ್ಲಿ ಇವರು ನಟಿಸಿದ ಪ್ರಮುಖ ಚಿತ್ರಗಳು == ಸಿಪಾಯಿ ತೂಗುವೆ ಕೃಷ್ಣನ ದ್ವೀಪ ನಾನು ನನ್ನ ಹೆಂಡ್ತೀರು ಶ್ರೀಮಂಜುನಾಥ ನಾಗದೇವತೆ ಆರ್ಯಭಟ ದೋಣಿ ಸಾಗಲಿ ಆಪ್ತಮಿತ್ರ ಶ್ರೀ ರೇಣುಕಾದೇವಿ ಯಲ್ಲಮ್ಮ == ಉಲ್ಲೇಖನ ==